ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗಲಿರುವ ಮೂರನೇ ಕಾಣಿಕೆ ‘ಬುಲ್ಬುಲ್ ಚಿತ್ರ ಫ಼ೆಬ್ರವರಿ ಹದಿನಾರರಂದು ಅದ್ದೂರಿ ಮುಹೂರ್ತದೊಂದಿಗೆ ಸೆಟ್ಟೇರಲಿದೆ. ಅಂದು ದರ್ಶನ್ ಅವರ ಹುಟ್ಟುಹಬ್ಬ. ಈ ಹಿಂದೆ ದರ್ಶನ್ ಅವರ ‘ಪೊರ್ಕಿ ಚಿತ್ರವನ್ನು ನಿರ್ದೇಶಿಸಿದ್ದ ಎಂ.ಡಿ.ಶ್ರೀಧರ್ ಈ ಚಿತ್ರದ ನಿರ್ದೇಶಕರು.
ತೂಗುದೀಪ ಪ್ರೊಡಕ್ಷನ್ಸ್ನ ನಿರ್ಮಾಪಕರಾದ ಶ್ರೀಮತಿ ಮೀನಾತೂಗುದೀಪಶ್ರೀನಿವಾಸ್ ಈ ಹಿಂದೆ ತಮ್ಮ ಕಿರಿಯ ಮಗ ದಿನಕರ್ ತೂಗುದೀಪ ಅವರ ನಿರ್ದೇಶನದಲ್ಲಿ ‘ಜೊತೆಜೊತೆಯಲಿ ಹಾಗೂ ‘ನವಗ್ರಹ ಚಿತ್ರಗಳನ್ನು ನಿರ್ಮಿಸಿದ್ದರು. ಈಗ ತಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಚಿತ್ರದ ನಿರ್ದೇಶನದ ಹೊಣೆಯನ್ನು ಎಂ.ಡಿ.ಶ್ರೀಧರ್ ಅವರಿಗೆ ವಹಿಸಿದ್ದಾರೆ. ಬೇರೆ ನಿರ್ದೇಶಕರಿಗೂ ತಮ್ಮ ಬ್ಯಾನರ್ನಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇದು ತೆಲುಗಿನ ‘ಡಾರ್ಲಿಂಗ್ ಚಿತ್ರದ ರಿಮೇಕ್.
ಇತೀಚೆಗೆ ಬಾಕ್ಸ್ಆಫ಼ೀಸ್ ಕೊಳ್ಳೆಹೊಡೆದ ‘ಸಾರಥಿ ಚಿತ್ರದ ನಿರ್ದೇಶಕರಾದ ದಿನಕರ್ ತೂಗುದೀಪ್ ಈ ಚಿತ್ರದ ನಿರ್ಮಾಣ ಮೇಲ್ವಿಚಾರಣೆಯನ್ನು ವಹಿಸಿಕೊಳ್ಳುವುದರೊಂದಿಗೆ ತಾಯಿ ಮತ್ತು ಅಣ್ಣನಿಗೆ ಸಾಥ್ ನೀಡಿದ್ದಾರೆ.
ತೂಗುದೀಪ ಪ್ರೊಡಕ್ಷನ್ಸ್ನ ಮೊದಲ ಚಿತ್ರ ‘ಜೊತೆಜೊತೆಯಲಿ ಮೂಲಕ ಪ್ರಥಮ ಬಾರಿಗೆ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ ವಿ.ಹರಿಕೃಷ್ಣ ‘ಬುಲ್ಬುಲ್ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ. ಕವಿರಾಜ್ ಗೀತರಚನೆ, ಖ್ಯಾತ ಛಾಯಾಗ್ರಾಹಕ ಕೃಷ್ನಕುಮಾರ್(ಕೆ ಕೆ) ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಉಳಿದ ಕಲಾವಿದರ ಹಾಗೂ ತಾಂತ್ರಿಕ ವರ್ಗದವರ ಆಯ್ಕೆ ಭರದಿಂದ ಸಾಗಿದೆ.
ದರ್ಶನ್ ಅಭಿನಯದ ‘ಚಿಂಗಾರಿ ಚಿತ್ರ ಫ಼ೆಬ್ರವರಿ ಮೊದಲವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅತೀ ಹೆಚ್ಚು ಬಜೆಟ್ನ ‘ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಮತ್ತು ‘ವಿರಾಟ್ ಬಿಡುಗಡೆಯಾಗಲಿರುವ ದರ್ಶನ್ ಅವರ ಮುಂದಿನ ಚಿತ್ರಗಳು.